Thursday 5 July 2012

ಸ್ವಗತ!


ಕ್ಷಣ ನಿಂತು ಯೋಚಿಸು...
ನೀನೇನ ಮರೆತೆಯೆಂದು!

ನೆನಪಿದೆಯೇ ನೀನೆಂದು ನೋಡಿದೆ,
ಮುಗಿಲಂಚಿನ ನಸುಗೆಂಪ ರವಿಯ?
ಅದ ನೋಡಿ ಹಿಗ್ಗಲಣಿಯಾದ ಮೊಗ್ಗನು?
ಸಾವಿರ ಮಳೆಬಿಲ್ಲ ಹೊತ್ತ ಪುಟಾಣಿ ಹಿಮಮಣಿಗಳ?

ಯಾಂತ್ರಿಕ ಪಥದಿ ಸಾಗಿರುವ ದಾಪುಗಾಲುಗಳೇ,
ಹಾಯಾಗಿ ತುಸುಕಾಲ ವಿಶ್ರಮಿಸಿ...
ರಕ್ಕಸ ಯಂತ್ರಗಳ ಸದ್ದನೂ ಮೀರಿ ಬರುವ,
ಕೋಗಿಲೆಯ ಇಂಚರ ಕಿವಿಗಪ್ಪಳಿಸಿತೇ?
ಮಧುರ ತರಂಗಗಳು ಮನ ಕೆರಳಿಸಿತೇ?

ಪಾತರಗಿತ್ತಿಯ ಬಣ್ಣ ಮರೆತು,
ಮೊದಲ ಮಳೆಯ ಸೊಗಡ ಹಿಂದಿಟ್ಟು,
ಭಾವಸಂಬಂಧಗಳ ಗಾಳಿಗೆ ತೂರಿಟ್ಟು,
ಯಾರ ಪ್ರಗತಿಗೆ ಓಡುತಿರುವೆ?
’ತಾನು’ಇಲ್ಲದ ಪ್ರಗತಿಗೆದ್ದ ದೇಶ ಯಾರಿಗಾಗಿ?!



No comments:

Post a Comment