Tuesday 20 May 2014

ಆಗಲೇಬೇಕಿದೆ!


ಧಗೆಯಲಿ ಬುವಿಯ ಬಾಯಾರಿರೆ,
ಸರಿಯಬೇಕಿದೆ ಆದಾನದ ನೆನಪು
ವಸಂತನಾಟದಿ ಸುಮ ನಲುಗಿರೆ,
ಹರಿಯಬೇಕಿದೆ ವರುಣನ ಛಾಪು.

ಜಾಡ್ಯದಿ ಕಾಲ್ಗಳು ಕುಸಿಯುತಿರೆ,
ಬೇಕಿದೆ ತಮ:ಶಮನದ ಹುರುಪು
ಹತಾಶೆಯ ಸುಳಿಯಲಿ ಸಿಲುಕಿರೆ,
ಹರಡಬೇಕಿದೆ ಸತ್ವದ ಹೊಳಪು.

ಬಂಧಗಳ ಬೆಸುಗೆ ಸವೆಯುತಿರೆ,
ಎರೆಯಬೇಕಿದೆ, ಎರಕದ ಬಿಸುಪು.
ನಂಟುಗಳ ಅಂಟಿಂದು ಒಣಗುತಿರೆ,
ಬೆರೆಯಬೇಕಿದೆ, ಒಲವಿನ ಒನಪು.

Friday 9 May 2014

ಆನಂದಮಯ ಬೆಳಗು!




ಇಂದಿನ ಬೆಳಗು ಸ್ತಬ್ಧ! ಹಕ್ಕಿ ಹಾಡುವುದ ಮರೆತು,
ಜಿನುಗು ಮಳೆ, ತೀಡುವ ತಂಗಾಳಿಗೆ ಮೈಮರೆತು,
ತನು ಮನ ನವಿರೇಳಿಸುವ ಈ ಆಹ್ಲಾದಕೆ ಸೋತು,
ಜೀವರಾಶಿಗಳಿದ ಅನುಭವಿಸುತಿವೆ ತಣ್ಣನೆ ಕುಳಿತು.

ನಿಲ್ಲೆ, ಹಸಿರ ತಂಬೆಲರ ಸಲ್ಲಾಪಕೆ ಮನ ಜೋತು
ಸಾಗಿದೆಯೊಡನೆ ನೆನಪಿನ ಬೋಗಿಯಲಿ ಕುಳಿತು,
ಮಸುಕಲೂ ಮಾಸದ ಹಾದಿಯೆಡೆ ಅಚ್ಚರಿಯೆನಿತು
ಹಚ್ಚ ಹಸಿರಾಗಿ ನಡೆಸಿವೆ ಎಲ್ಲವೂ ಮೂಕಮಾತು!

ಹಾಯ್ದು ಬಂದ ದಾರಿ
ಸ್ಪಷ್ಟ, ತಪ್ಪಿದ ಗತಿಯೆನಿತು!
ಅಲ್ಲೇ ಕಣ್ಮಿಟುಕಿಸುತಿವೆ ಕೈಗೂಡದ ಆಸೆಗಳವಿತು,
ವಿರಮಿಸಿವೆ ಸುಮ್ಮನೆ ತಮ್ಮೆಲ್ಲ ಕಲಹಗಳ ಮರೆತು.
ಗಾಢ ನೀರವ ಶಾಂತ ಭಾವ ನನಗಿಂದು ಹೊಸತು!

ಸುಡುವ ಧರೆಯ ಕಾವಿಗಾಗಿರಲು ಮಳೆಹನಿಗಳಿನಿತು
ಪ್ರಕ್ಷುಬ್ಧ ಮನ ಶಾಂತವಾಗದೇ ಪನ್ನೀರಿನಲಿ ಬೆರೆತು?
ಭಾವವೈರುಧ್ಯಗಳಲೂ ಏಕತಾನದ ಪರಿಯ ಕಲಿತು,
ಶಾಂತಚಿತ್ತದಿ ನಲಿದೆ ನಿಸರ್ಗ ಕಲಿಸಿದ ಪಾಠವರಿತು!