Friday 24 May 2013

ಮಾಯಾಬಜಾರ್




ಜಗವನಾವರಿಸಿರೆ ಮಿಥ್ಯೆಯ ಮಾಯೆ
ಮುಸುಕಲಿ ಮರುಗಿದೆ ಸತ್ಯದ ಛಾಯೆ
ಬೇತಾಳನಾಗಿ ತಾ ನೆರಳಲಿ ಸೇರಿರೆ,

ಅರಿಯದೇ ಕವಿಪ ಮಾಯಾಪ್ರಕ್ರಿಯೆ.
 
ಬಿಡಿಸಿಕೊಂಬೆನೆಂದರೂ ಬಿಡದ ಜಾಲ
ಬುವಿಯಾಗಸ ಪಸರಿಸಿಹ ರಕ್ಕಸ ಆಲ
ಮಾತ್ರ ತಣಿಸದಿದೆಂದೂ ಕ್ಷಣ ಕಾಲ,
ಜೀವವ ನೋಯಿಸುವ ಹಾಲಾಹಲ!

ಮರೀಚಿಕೆಯಂದದಿ ಬರಸೆಳೆವ ಪಾಶ,
ವಿವೇಕ ಮಣಿಸುವ ಮಾವುತನಂಕುಶ.
ಈ ಮಾಯಾಬಜಾರಿನ ಕ್ಷಣಿಕ ತೋಷ
ಪುತ್ಥಳಿಗಳೆಮಗೆಲ್ಲಿದೆ ಮೀರ್ವ ಪೌರುಷ

ದೇವಾದಿದೇವರನು ಮಣಿಸಿಹ ರಾಗ
ಧೀಧೃತಿಗೆ ಸವಾಲಿಡುವುದು ಆಗೀಗ.
ಮಿಥ್ಯಾಚಕ್ರವ್ಯೂಹವ ಭೇದಿಸಬೇಕೀಗ,
ಹರಸಾಹಸಗೈದು ಸತ್ಯ ಗೆಲ್ಲಬೇಕೀಗ.



(ತಿಳಿಯದವರಿಗೆ: ರಾಗ-ಅರಿಷಡ್ವರ್ಗಾದಿ ಮಾನಸ ಅವಗುಣಗಳು)

Friday 3 May 2013

ಅವರು-ಇವರು-ನಾವು


ಅರಿವಿರಲಿ, ಅವರಿವರಿಗಿಲ್ಲಿ ನಾವವರಿವರು!
ಅವರಿವರಿಗರಿವು ತರಿಸಲಿಹದಿ ಸರಿಯಾರು?
ಅವರಿವರಿಗಿವರವರಿಗೆ, ಬೆರಳ ತೋರ್ವರು,
ತಾವೇ ಅರಿವಿನತ್ತ ನಡೆವ ಪರಿಯದೇ ಸರಿ!

ಅರಿವಿಂದು ಉದ್ಧರಿಸಲವರಿವರ ಬದುಕು!
ನಮ್ಮಂಥ ಜ್ಞಾನಿಗಳಿಗಲ್ಲವೇ ಈ ಸರಕು!
ಅವರಿವರು ನಮಗೆ ಹೀಗೆ, ಹಾಗಿರಬೇಕು,
ಇವರಿಂದರಿತು ಅವರ ಮೇಲೆ ಹೇರಬೇಕು!

ಅವರಿವರ ಬಿಟ್ಟು ಅಂತರ್ಮುಖವಿರಲರಿವು,
ಪ್ರತಿಯೋರ್ವ ಕಾಂಬ ಅವರಿವರಲೊಲವು.

ಜಗವ ತಿದ್ದುವುದಕಿಂತ ಮೇಲಿದರ ಸುಖವು,
ನಿನ್ನೆಯಿಂದಿನಿತು ಬೆಳೆವುದೇ ನಿಜ ಗೆಲುವು!