ಜಗವನಾವರಿಸಿರೆ ಮಿಥ್ಯೆಯ ಮಾಯೆ
ಮುಸುಕಲಿ ಮರುಗಿದೆ ಸತ್ಯದ ಛಾಯೆ
ಬೇತಾಳನಾಗಿ ತಾ ನೆರಳಲಿ ಸೇರಿರೆ,
ಅರಿಯದೇ ಕವಿಪ ಮಾಯಾಪ್ರಕ್ರಿಯೆ.
ಬಿಡಿಸಿಕೊಂಬೆನೆಂದರೂ ಬಿಡದ ಜಾಲ
ಬುವಿಯಾಗಸ ಪಸರಿಸಿಹ ರಕ್ಕಸ ಆಲ
ಮಾತ್ರ ತಣಿಸದಿದೆಂದೂ ಕ್ಷಣ ಕಾಲ,
ಜೀವವ ನೋಯಿಸುವ ಹಾಲಾಹಲ!
ಮರೀಚಿಕೆಯಂದದಿ ಬರಸೆಳೆವ ಪಾಶ,
ವಿವೇಕ ಮಣಿಸುವ ಮಾವುತನಂಕುಶ.
ಈ ಮಾಯಾಬಜಾರಿನ ಕ್ಷಣಿಕ ತೋಷ
ಪುತ್ಥಳಿಗಳೆಮಗೆಲ್ಲಿದೆ ಮೀರ್ವ ಪೌರುಷ
ದೇವಾದಿದೇವರನು ಮಣಿಸಿಹ ರಾಗ
ಧೀಧೃತಿಗೆ ಸವಾಲಿಡುವುದು ಆಗೀಗ.
ಮಿಥ್ಯಾಚಕ್ರವ್ಯೂಹವ ಭೇದಿಸಬೇಕೀಗ,
ಹರಸಾಹಸಗೈದು ಸತ್ಯ ಗೆಲ್ಲಬೇಕೀಗ.
(ತಿಳಿಯದವರಿಗೆ: ರಾಗ-ಅರಿಷಡ್ವರ್ಗಾದಿ ಮಾನಸ ಅವಗುಣಗಳು)