ನಿರೀಕ್ಷೆಯಿರೆ ಕಂಗಳಲಿ
ಸಮೀಕ್ಷೆಯು ಮನದಲಿ
ನೋಟವಿರೆ ಬಾನೆಡೆಗೆ
ಓಟವಿದೆ ಗುರಿಯೆಡೆಗೆ!
ದಾರಿಯಿದು ದುರ್ಗಮ,
ಬದುಕನಿಸಿರೆ ಕೃತ್ರಿಮ,
ಇರೆ ತೃಪ್ತಿಯ ಮೈತ್ರಿ,
ಪೊರೆವಳು ಈ ಧಾತ್ರಿ.
ನಿರ್ಮಲ ತನು ಮನ,
ನಿಚ್ಚಳ ಅವಲೋಕನ,
ನಿಲುವಿರಲಿ ಬಾನೆತ್ತರ
ಅರಿವಿರಲಿ ನಿರಂತರ.
ತ್ರಸ್ತ ಮನವ ಸಂತೈಸಿ
ಆಪ್ತ ಜನಕೆ ಪ್ರಸ್ಪಂದಿಸಿ
ಎಲ್ಲರೊಳಗೆ ಸೇರಿ ಬೆರೆ,
ಆದಲ್ಲಿ ನೀಡುತ ಆಸರೆ.
ಅಣು ನೀ ಬ್ರಹ್ಮಾಂಡದಿ,
ಋಣಿ, ಬುವಿಯಾತಿಥ್ಯದಿ,
ಕಳೆ ಪ್ರತಿಶ್ವಾಸವನಂದದಿ,
ತಾಮರದೆಲೆಹನಿಯಂದದಿ!