Thursday 5 July 2012

ಇಳೆ ತಣಿಪ ಮಳೆ!


ರವಿಯ ಝಳವನೋಡಿಸುತ ಬಂತು ಸುರಿಮಳೆ,
ಬುವಿಯ ಧಗೆಯನಾರಿಸುತ ತಂತು ನೀರಹೊಳೆ.

ನೊಂದ ಮನಕೆ ಹುಗ್ಗಿಯಂದದಿ ಇಳೆತಣಿಪ ಮಳೆ,
ಬೆಂದ ಜನಕೆ ಸುಗ್ಗಿಯಂದದಿ ತುಂಬಿ ಬರುವ ಬೆಳೆ!

ಅವನಿಯ ತಣಿಸಲು ತುಂಬಿತು ತೊರೆ ತೋಡು
ನನ್ನನು ಮರೆಸಲು ಆವರಿಸಿತು ಮಣ್ಣ ಸೊಗಡು!

ಬಾನಾಡಿಯಾಗಿ ಹಾರಿತು ಮನ ಬಾಂದಳದಾಚೆ,
ಬಾಡಿ ಬರಲೊಲ್ಲೆನೆಂದಿತು ನೆನಪಿನಂಗಳದೀಚೆ!

ಬಸಿರ ರಾಚಿತು ಎದೆಯಾಳದಿಂದ ಕದಡಿ ರಾಡಿ,
ಹಸಿರ ತಂದಿತು ಮಧುರ ನೆನಹು ಅಲ್ಲಿಲ್ಲಿ ಕಾಡಿ!

ನಿಂತ ಮಳೆಯು ನಿಲ್ಲಿಸಿತು ಮಧುರ ಗತ ವಿಹಾರ
ಕಾಗದನೌಕೆಯ ಹಿಂತೇಲಿಸಿ ನಾಳೆಗಾದೆನಾ ಆಹಾರ!



No comments:

Post a Comment