ಚಡಪಡಿಸುತಿವೆ ಹಾಳೆಗಿಳಿಯಲಕ್ಷರಗಳು
ಪರಿತಪಿಸುತಿವೆ ಅಣೆಗಟ್ಟೊಳ ಭಾವಗಳು
ಧಾರೆಯಾಗಲು ಕಾಯುತಿವೆ ಸಾಲುಗಳು
ಇವೋ ಬಸಿರಾಗಿ ಹಡೆಯದ ಮೋಡಗಳು!
ಪ್ರೀತಿಗೆ ಕಾದು ನಿರಾಸೆಗೊಂಡ ಕ್ಷಣಗಳು
ತಣಿಸದ ತುಂತುರುವಿನ ರಸನಿಮಿಷಗಳು
ದಕ್ಕದ ಗುರಿಯ ಬೆನ್ನಟ್ಟಿದ ಹುಸಿದಿನಗಳು
ಬೆಂದಿವೆ, ನೊಂದಿವೆ ಮನ:ಪಟಲದೊಳು!
ನಾ ಹಿಗ್ಗಿರಲು ಹೊಳೆದ ಅಪ್ಪನ ಕಣ್ಣುಗಳು
ಕುಗ್ಗಿರಲು, ಮುಲಾಮಾದ ಹಿರಿಯ ಕೈಗಳು
ಮೈ ಮರೆತಿರೆ ನೋವಲೆಚ್ಚರಿಸಿದ ಕಾಲ್ಗಳು
ಮೂರ್ತತ್ವ ಬೇಡಿವೆ ಭಾವಪರಿಧಿಯೊಳು!
ಹರಿಹಾಯಲು ಮುಗಿಬೀಳುತಿಹ ಲಹರಿಗಳು
ಎಡೆಕಾಣದೆ ನಾ ಮರುಗಿರೆ ತುಮುಲದೊಳು
ಉತ್ಕಟಕತೆಯೆದುರು ಸೋಲುತಿರೆ ಪದಗಳು
ಭಾವಪ್ರವಾಹವೇ ಏಳಬೇಕಿದೆಯೆದೆಯೊಳು!
ಹಲವು ಲಹರಿಗಳ ಸಂಗಮ ನಿಮ್ಮ ಈ ಪರಿಪೂರ್ಣ ಕವನ.
ReplyDelete'ಮೂರ್ತತ್ವ ಬೇಡಿವೆ ಭಾವಪರಿಧಿಯೊಳು!' ಸಾಲು ತಮ್ಮ ಕಾವ್ಯ ಪಟುತ್ವಕ್ಕೆ ಒಂದು ಉದಾಹರಣೆ.