Tuesday 1 January 2013

ಭರತಖಂಡದ ಪರಾಭವ!



ಸಂತೋಷಿಸಿ, ಕುಣಿದು ಕುಪ್ಪಳಿಸಿ,
ರಕ್ತ ಮಾಂಸದ ಔತಣವಿಂದಿರಲಿ,
ಮದ್ಯರಸದ ಹೊನಲಲಿ ತೇಲಾಡಿ,
ವಿಜಯ ವೈಭೋಗ ಅನುಭವಿಸಿ,
ಭಾರತ ನಾರುತಿರುವುದ ನೋಡಿ.

ಓ ದಾನವರೇ, ನಿಮ್ಮಿಚ್ಛೆಯಂತೆ,
ಮೆರೆಯುತಿದೆಯಿಲ್ಲಿ ಅರಾಜಕತೆ,
ನಲಿಯುತಿದೆಯಿಲ್ಲಿ ಅನೈತಿಕತೆ,
ಹಾಸುಹೊಕ್ಕಿದೆ ಅನಾಗರೀಕತೆ,
ದೈವಶಕ್ತಿಯೀಗಂತೂ ದಂತಕತೆ!

ನ್ಯಾಯದೇವಿಯ ಕರುಳ ಹರಿದಿರೆ,
ರಕ್ಕಸಕುಲ ಅಟ್ಟಹಾಸಗೈಯುತಿರೆ,
ಗೋಮುಖವ್ಯಾಘ್ರರು ಹೆಚ್ಚುತಿರೆ,
ಅಮಾನುಷತ್ವ ಮಿತಿ ಮೀರುತಿರೆ,
ಅದೆಂದೋ ಸಮುದ್ರಮಥನದ ಕರೆ?

Note: ದೆಲ್ಲಿಯಲ್ಲಿ 29ರಂದು ದಾಮಿನಿಯ ದಾರುಣ ಸಾವಿನ ಸುದ್ದಿ ಕೇಳಿದಾಗ ಅತೀವ ನೋವಿನಲ್ಲಿ ಹೊರಹೊಮ್ಮಿದ ಸಾಲುಗಳಿವು. ಇವುಗಳು ಭಾರತದ ಬಗ್ಗೆ ತೋರಿದ ನಿಲುವಲ್ಲ. ಈ ಘಟನೆಯಿಂದ ಮನಸ್ಸು ಅತಿಯಾಗಿ ಘಾಸಿಗೊಂಡಿದ್ದರೂ ನನ್ನ ದೇಶಪ್ರೇಮಕ್ಕೆ ಧಕ್ಕೆ ತಂದಿಲ್ಲ. ಭಾರತದ ಭವಿಷ್ಯ ಉಜ್ವಲವಾಗಿದೆಯೆಂದು ಇಂದೂ ನಂಬಿದ್ದೇನೆ. ಆ ನಿಟ್ಟಿನಲ್ಲಿ ನನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಲೂ ಇದ್ದೇನೆ.

No comments:

Post a Comment